ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ

ರಾಮನಗರ: ದ್ವಿಚಕ್ರ ವಾಹನ ಅಪಘಾತವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಸೋವಾರ ಸಂಜೆ ೭ ಗಂಟೆ ಸಮಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಜಾಲಮಂಗಲ ರಸ್ತೆಯಲ್ಲಿ ರಾಮನಗರದ ಕಡೆ ಬರುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ ೨೭೫ರ ಬೈಪಾಸ್ ರಸ್ತೆ (ಕಾಮಗಾರಿ ಪ್ರಗತಿಯಲ್ಲಿದೆ) ಬಳಿ ಇಬ್ಬರು ಯುವಕರು ರಸ್ತೆಯಲ್ಲಿ ಬಿದ್ದಿದ್ದನ್ನು ಗಮನಿಸಿದ್ದಾರೆ. ಕೆಳಗಿಳಿದು ನೋಡಿದಾಗ ಅಕ್ಕೂರು ಗ್ರಾಮದವರೆನ್ನಲಾದ ಶಂಕರ ಮತ್ತು ಹನುಮಂತೇಗೌಡ ಅವರ ಮುಖ, ಕೈ, ಕಾಲಿಗೆ ರಕ್ತ ಗಾಯಗಳಾಗಿದ್ದನ್ನು ಗಮನಿಸಿದ್ದಾರೆ. ಅಲ್ಲೇ ಒಂದಷ್ಟು ಜನ ವಾಹನ ಸವಾರರು, ದಾರಿ ಹೋಕರು ಗಾಯಗೊಂಡವರನ್ನು ನೋಡಿದರೆ ಹೊರತು ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿರಲಿಲ್ಲ.
ಮಾಜಿ ಶಾಸಕರೇ ತಮ್ಮ ಕಾರಿನಲ್ಲಿ ಇಬ್ಬರೂ ಗಾಯಾಳುಗಳನ್ನು ರಾಮನಗರದ ರಾಮಕೃಷ್ಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.
ಮಾಜಿ ಶಾಸಕರ ಜೊತೆ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ, ಕಾಂಗ್ರೆಸ್ ಮುಖಂಡ ಅಬ್ಬನಕುಪ್ಪೆ ರಮೇಶ್, ಮಾಗಡಿ ಕೆಂಪೇಗೌಡ ಕೋ ಆಪರೇಟಿವ್ ಸೊಸೈಟಿಯ ಸಿಇಒ ಲೋಕೇಶ್ ಜೊತೆಗಿದ್ದರು.