ಡಿಕೆಶಿ ಮುಖ್ಯಮಂತ್ರಿ ಆಗಬೇಕು‌- ಶಾಸಕ‌ ಇಕ್ಬಾಲ್ ಹುಸೇನ್

ರಾಮನಗರ: ಸಚಿವರು, ಕಾಂಗ್ರೆಸ್ ಶಾಸಕರು, ಪ್ರಮುಖ ಕಾರ್ಯಕರ್ತರು ಸಿಎಂ ಸ್ಥಾನ ಸೇರಿದಂತೆ ಪಕ್ಷದ ವಿಚಾರಗಳ ಬಗ್ಗೆ ಬಹಿರಂಗ ಹೇಳಿಕೆ ಕೊಡುವುದು, ಚರ್ಚೆ ಮಾಡುವುದನ್ನು ಮಾಡಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ ಖಡಕ್ ವಾರ್ನಿಂಗ್ ಕೊಟ್ಟ ನಂತರವೂ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿಯೇ ಪ್ರಕಡಿಸುತ್ತಿದ್ದಾರೆ. ಈ ಪಟ್ಟಿಗೆ ರಾಮನಗರ ಶಾಸಕರು ಸಹ ಪ್ರತಿಕ್ರಯಿಸಿದ್ದಾರೆ. ಡಿಕೆಶಿ ಪರ ಬ್ಯಾಡಿಂಗ್ ಮಾಡಿದ್ದಾರೆ. ನೇರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದವೇ ಗುಡುಗಿದ್ದಾರೆ.
ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗಾರರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡುತ್ತಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಹಾಗಾಗಿ ಡಿ.ಕೆ.ಶಿವಕುಮಾರ್ ಗೆ ಅವಕಾಶ ಸಿಗಲೇಬೇಕು. ರಾಜ್ಯದ ಜನತೆ ಕೂಡಾ ಅದನ್ನೇ ಬಯಸಿದ್ದಾರೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿಎಂ ಸಿದ್ದರಾಮಯ್ಯರವರ ಮಾತಿಗೆ ಬೇಸರ ವ್ಯಕ್ತ ಪಡಿಸಿದ ಅವರು, ಇಲ್ಲಿ ಕೆಲಸಕ್ಕೆ ಬಾರದವರು ಯಾರೂ ಇಲ್ಲ. ಎಲ್ಲರೂ ಕೆಲಸಕ್ಕೆ ಬರುವವರೆ. ನಮ್ಮನ್ನು ಶಾಸಕ ಅಂತ ಕರೆಯುತ್ತಾರೆ. ಅವರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ಹೇಳಿದರು.