ಜ.3ರಂದು ರಾಮನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ

ರಾಮನಗರದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್ . ಅಂಬೇಡ್ಕರ್ ಪ್ರತಿಮೆ ಅನಾವರಣ, 289 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ರಾಮನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ.3ರ ಸೋಮವಾರ ರಾಮನಗರ ಜಿಲ್ಲಾ ಕೇಂದ್ರ ಮತ್ತು ಮಾಗಡಿ ತಾಲ್ಲೂಕಿಗೆ ಭೇಟಿ ಕೊಡುತ್ತಿದ್ದು, ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರು‌ ತಿಳಿಸಿದರು.

ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತವು ಸಿದ್ಧತೆಗಳನ್ನು ಮಾಡಿಕೊಂಡಿದೆ.

ಮೊದಲಿಗೆ ಡಿಸಿ ಕಚೇರಿ ಆವರಣದಲ್ಲಿ ನಾಡಪ್ರಭು ಕೆಂಪೇಗೌಡ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗಳನ್ನು ಮುಖ್ಯಮಂತ್ರಿ ಅನಾವರಣಗೊಳಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬಳಿಕ ನಗರಾಭಿವೃದ್ಧಿ ಇಲಾಖೆ ಹಲವು ಗ್ರಾಮಗಳಿಗೆ ನದೀಮೂಲದ ನೀರು ಪೂರೈಸುವ ನಳ ಸಂಪರ್ಕ ವ್ಯವಸ್ಥೆ, ಪ್ರಾಧಿಕಾರದ ಕಟ್ಟಡದ ಮೇಲ್ಚಾವಣಿಯಲ್ಲಿ ಸೌರಶಕ್ತಿ ಫಲಕ, ಕಂದಾಯ ಭವನದ ಕೋವಿಡ್ ರೆಫರಲ್ ಆಸ್ಪತ್ರೆ, ಕನಕಪುರ ಸಾರ್ವಜನಿಕ ಆಸ್ಪತ್ರೆಯ ಆಮ್ಲಜನಕ ಘಟಕ, ಜಿಲ್ಲೆಯಲ್ಲಿ ನೂತನವಾಗಿ ನಿರ್ಮಿಸಿರುವ 5 ಅಂಗನವಾಡಿ ಮತ್ತು 6 ಪಶು ಆಸ್ಪತ್ರೆಗಳು, ಚನ್ನಪಟ್ಟಣ ತಾ.ನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಹೆಚ್ಚುವರಿ ಕೊಠಡಿಗಳು, ಮಾಕಳಿ ಮತ್ತು ಚಕ್ಕೆರೆಗಳಲ್ಲಿ ನಿರ್ಮಿಸಿರುವ ಸರಕಾರಿ ಪದವಿಪೂರ್ವ ಕಾಲೇಜುಗಳನ್ನು ಉಭಯ ಮುಖಂಡರು ಉದ್ಘಾಟಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬೊಮ್ಮಾಯಿ ಮತ್ತು ಅವರು ಬಿಡದಿ ಪಟ್ಟಣದ ಒಳಚರಂಡಿ ಕಾಮಗಾರಿ, 1,100ಕ್ಕೂ ಹೆಚ್ಚು ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಲ್ಲಿ ಸಂಪರ್ಕ, ರಾಮನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯ 2 ಮತ್ತು 3ನೇ ಮಹಡಿ, ಅರ್ಚಕರಹಳ್ಳಿಯಲ್ಲಿ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಹಾಸ್ಟೆಲ್ ನಿರ್ಮಾಣ ಮತ್ತು ರಾಮನಗರದಲ್ಲಿ ತಲೆಯೆತ್ತಲಿರುವ ಸರಕಾರಿ ಯುನಾನಿ ಕಾಲೇಜು ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಮಾಗಡಿ ತಾ.ನಲ್ಲೂ ಅಭಿವೃದ್ಧಿ ಪರ್ವ

ರಾಮನಗರದ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಮತ್ತು ಸಚಿವರು ಮಾಗಡಿ ತಾಲ್ಲೂಕಿನಲ್ಲಿರುವ ಚಿಕ್ಕಕಲ್ಯ ಗ್ರಾಮಕ್ಕೆ ತೆರಳಲಿದ್ದು, ಅಲ್ಲಿ ಅತ್ಯಾಧುನಿಕ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ.

ಇದರ ಜತೆಗೆ ತಾಲ್ಲೂಕಿನ ತಿಪ್ಪಸಂದ್ರ ಹೋಬಳಿಯಲ್ಲಿ 100 ಎಕರೆ ವಿಸ್ತಾರದಲ್ಲಿ ತಲೆಯೆತ್ತಲಿರುವ ಕರ್ನಾಟಕ ರಾಜ್ಯ ಸಂಸ್ಕೃತ ವಿವಿ ಕ್ಯಾಂಪಸ್, ಕರ್ನಾಟಕ ಮುಕ್ತ ವಿವಿ ಪ್ರಾದೇಶಿಕ ಕೇಂದ್ರ ನಿರ್ಮಾಣ, ಅಜ್ಜನಹಳ್ಳಿಯಲ್ಲಿ ಮೆಟ್ರಿಕ್-ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಾಣ, ಮಾಗಡಿ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕದ ಹಾಸ್ಟೆಲ್ ಮತ್ತು ನೂತನ ಗ್ರಂಥಾಲಯ ಕಟ್ಟಡ, ಕುದೂರಿನಲ್ಲಿ ತಲೆಯೆತ್ತಲಿರುವ ಮೆಟ್ರಿಕ್-ಪೂರ್ವ ಬಾಲಕಿಯರ ಹಾಸ್ಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಿಬ್ಬಂದಿ ವಸತಿ ಗೃಹ ಕಾಮಗಾರಿ, ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಟ್ಟಡ, ಉಕ್ಕಡ ಮತ್ತು ಕರಿಯನ ಪಾಳ್ಯ ಗ್ರಾಮಗಳಿಗೆ ಶುದ್ಧ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಅಲ್ಲದೆ, ಈಗಾಗಲೇ ನಿರ್ಮಾಣವಾಗಿರುವ ಬೆಸ್ಕಾಂ ವಿಭಾಗೀಯ ಕಚೇರಿ, 10 ಕಿ.ಮೀ. ರಸ್ತೆ ಮತ್ತು 5 ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ.

ಕೆಂಪಾಪುರಕ್ಕೆ ಭೇಟಿ ನೀಡಿ ಕೆಂಪೇಗೌಡರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.