ರಾಮನಗರ, ಜೂ.21, 2020: ರಾಮನಗರ ಜಿಲ್ಲೆ ಕನಕಪುರ ನಗರದ ನವೋದಯ ಕ್ಲಿನಿಕ್ನ ವೈದ್ಯ ದಂಪತಿ ಡಾ.ರಶ್ಮಿ ಹಾಗೂ ಡಾ.ಚೇತನ್ ಅವರಲ್ಲಿ ಸೋಂಕಿನ ಲಕ್ಷಣಗಳೇನು ಇಲ್ಲದಿದ್ದರೂ, ಕಳೆದ ಗುರುವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಸಧ್ಯ ಇವರು ಕೋವಿಡ್ 19 ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇದಕ್ಕೂ ಮುನ್ನ ಈ ವೈದ್ಯ ದಂಪತಿಗಳು ಕನಕಪುರದ ಸುಮಾರು 600ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದರು ಎಂಬ ಹೇಳಲಾಗುತ್ತಿದೆ. ಇವರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಪೈಕಿ ಕೆಲವರಿಗೆ ಸೋಂಕು ದೃಢಪಟ್ಟಿದೆ. ಈ ವೈದ್ಯ ದಂಪತಿಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಅವರ ಬಳಿ ಚಿಕಿತ್ಸೆ ಪಡೆದವರಲ್ಲಿ ಆತಂಕ ಹೆಚ್ಚಾಗಿದೆ.
ಈ ವಿಚಾರ ತಿಳಿದ ವೈದ್ಯೆ ರಶ್ಮಿ, ತಮ್ಮ ಬಳಿ ಚಿಕಿತ್ಸೆ ಪಡೆದವರಲ್ಲಿ ಧೈಯಸರ್ಯ ತುಂಬಲು ಕೋವಿಡ್ ಆಸ್ಪತ್ರೆಯಲ್ಲೇ ಸೆಲ್ಪಿ ವೀಡಿಯೋ ಮಾಡಿ ತಮ್ಮ ಗ್ರಾಹಕರಿಗೆ ತಲುಪಿಸಿದ್ದಾರೆ. ಸಧ್ಯ ಈ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ತಮಗೆ ಕೊರೊನಾ ಸೋಂಕು ಲಕ್ಷಣಗಳೇನು ಇಲ್ಲ, ಸಾಮಾನ್ಯ ಕೆಮ್ಮು, ನೆಗಡಿಯಂತೆ ಕೋವಿಡ್ 19 ಸೋಂಕು ಕೂಡ. ಈ ವೈರಸ್ ಎಲ್ಲರಿಗೂ ಮಾರಣಾಂತಿಕವಲ್ಲ ಎಂದು ಧೈರ್ಯ ತುಂಬಿದ್ದಾರೆ.
ತಮ್ಮ ಬಳಿ ಚಿಕಿತ್ಸೆ ಪಡೆದಿರುವ ಗಭಿರ್ಣಿಯರು ಸ್ವಯಂ ಪ್ರೇರಿತರಾಗಿ ಕೋವಿಡ್ 19 ಪರೀಕ್ಷೆಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ. ನೆಗಟಿವ್ ಬಂದರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಳ್ಳುವದನ್ನು, ಮಾಸ್ಕ್ ಧರಿಸುವುದನ್ನು ಮರೆಯಬಾರದು, ಪೌಷ್ಠಿಕಾಂಶ ಆಹಾರ ಸೇವಿಸಿ, ಬೆಚ್ಚಗಿರಿ ಎಂದು ಅವರು ಸಲಹೆ ನೀಡಿದ್ದಾರೆ.
ತಾವೇ ಸ್ವತಃ ಸೋಂಕಿತರಾಗಿ ಆಸ್ಪತ್ರೆಯಲ್ಲಿದ್ದರೂ, ತಮ್ಮ ಬಗ್ಗೆ ವಿಶ್ವಾಸವಿಟ್ಟು ಚಿಕಿತ್ಸೆಗೆ ಬಂದವರಿಗೆ ವೀಡಿಯೋ ಮೂಲಕ ಧೈರ್ಯ ತುಂಬುತ್ತಿರುವುದನ್ನು ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
……..